ನವೋದಯದ ನಲವು : ಜಿ ಎಸ್ ಎಸ್

ನವಿರಾದ ಭಾವದಲೆಗಳ
ಸೀಳುತ್ತಾ ಮುನ್ನುಗ್ಗುತ್ತಿತ್ತು
ನವ್ಯದ ಹಡಗು

ಆಹಾ! ಏನು ಬಿಂಕ, ಬೆಡಗು, ಬಿನ್ನಾಣ
ಕೋಡುಗಲ್ಲಿನ ಮೇಲೆ
ಕಡಲ ಹಕ್ಕಿಗಳಂತೆ ಕೂತು ನೋಡಿದೆವು.

ಕಾರಿರುಳು-
‘ಕರಿಯ ನಭದ ಕಣ್ಗಳಂತೆ
ಅಭಯದೊಂದು ರೂಹಿನಂತೆ
ತೇಲಿಬಿಟ್ಟ ದೀಪದಂತೆ’
ನೂರು ತಾರೆ ಬೆಳಕ ಬೀರಲು
ಪುಟ್ಟ ದೋಣಿಯಲಿ ಕೂತು
ರಾತ್ರಿ-ಹಗಲು ರಾಕ್ಷಸ ಅಲೆಗಳನ್ನು ತಳ್ಳುತ್ತಾ
ಹರಸಾಹಸದಿಂದ ದಡ ಸೇರಿದೆವು.

ಮುಸ್ಸಂಜೆ-
ಆಗಸದಲ್ಲಿ ಬೆಳ್ಳಕ್ಕಿಗಳ ಸಾಲು
‘ದೇವರ ರುಜು’
ಪರವಶತೆಯಿಂದ ನೋಡಿದೆವು.
ಕಣಿವೆಯ ಮುದುಕ
ಕೈ ಮರವಾದ; ಮುನ್ನಡೆದೆವು.
‘ಮೂಡಲ ಮನೆಯಲ್ಲಿ ಮುತ್ತಿನ ನೀರು
ಗಿಡಗಂಟೆಗಳ ಕೊರಳಲ್ಲಿ ಹಕ್ಕಿಗಳ ಹಾಡು’
ತಲೆದೂಗಿದೆವು.

ಶಾನುಭೋಗರ ಮಗಳು
ಕಾಲಿಗೆ ನೀರಿತ್ತು ಕೈತುತ್ತು ನೀಡಿದಳು;
‘ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ’ ತಲೆಬಾಗಿದೆವು.

ಹಾದಿಯ ತುಂಬಾ
ನಗುತ್ತಿತ್ತು ಏಳುಸುತ್ತಿನ ಮಲ್ಲಿಗೆ
‘ಹಚ್ಚನೆ ಹಸುರ ಗಿಡದಿಂದೆಂತು
ಮೂಡಿತ್ತೋ ಬೆಳ್ಳಗೆ’
-ಅನತಿ ದೂರದಲ್ಲೇ ಕಲ್ಲು ಬಂಡೆಯನ್ನೇರಿ
ಅದಾರೋ… ಯಾರವರು, ಯಾರು?
ಎದೆತುಂಬಿ ಹಾಡುತ್ತಿದ್ದರು.

ಹಮ್ಮು-ಬಿಮ್ಮು ಸೋಕದ ಹಾಡು
ನೊಂದ ಜೀವರಿಗೆ ತಂಪನೀಯುವ ಹಾಡು
ಪ್ರೀತಿ-ಸ್ನೇಹಗಳ ಪಸರಿಸುವ ಹಾಡು
ಎಲ್ಲೋ ಅಳುವ ಮಗುವನೂ ಸಂತೈಸುವ ಹಾಡು
ನವ-ನವೀನ ಭಾವದ ಹಾಡು.

ಹಾಡಿನ ಹಾಡಿಯಲ್ಲಿ ಬೀಡುಬಿಟ್ಟು
ಹಾಡಿಗೆ ನಮ್ಮನ್ನೇ ನಾವು ಕೊಟ್ಟು ಕೊಂಡೆವು
ನೂರು ಭಾವದ ಬಾವಿ ಮೊಗೆ ಮೊಗದು
ಸಿಹಿನೀರ ಕುಡಿದೆವು

ಕಡಲನೀಜುವೆನೆಂಬ ಮರುಳ ಹಡಗು
ತನಗೆ ತಾ ಹೊರೆಯಾಗಿ ತಾನೆ ಮುಳುಗುತ್ತಿತ್ತು…
ಅಲೆಯ ಮೇಲೊಂದು ತಾವರೆಯ ಎಲೆ
ಎಲೆಯ ಮೇಲೊಂದು ಪುಟ್ಟ ಹಣತೆ
ತೇಲುತ್ತಿತ್ತು ತನ್ನ ಪಾಡಿಗೆ ತಾನೇ
ನೀಲ ಮೌನದಲ್ಲಿ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈಲ್ ಸಿಂಗ್ ನೆನಪಿನಲ್ಲಿ….
Next post ದಶಮಗ್ರಹ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys